July 14, 2026
kranthikidi.com
ತಾಜಾಸುದ್ದಿದೇಶ

ಸೋಪಿನ ಪೌಡರ್ ಬಳಸಿ 2.3 ಕೋಟಿ ಲೀಟರ್ ನಕಲಿ ಹಾಲು ಮಾರಾಟ..!

ಮಹಾರಾಷ್ಟ್ರ : ಮಹಾರಾಷ್ಟ್ರದ ಧಾರಾಶಿವ್ ಜಿಲ್ಲೆಯಲ್ಲಿ ಬೃಹತ್ ಪ್ರಮಾಣದ ಕೃತಕ ಅಥವಾ ನಕಲಿ ಹಾಲಿನ ಜಾಲವನ್ನು ಪೊಲೀಸರು ಹಾಗೂ ಆಹಾರ ಮತ್ತು ಔಷಧ ಆಡಳಿತ ಸಂಸ್ಥೆ ಪತ್ತೆಹಚ್ಚಿದೆ. ಕಳೆದ 6 ತಿಂಗಳಲ್ಲಿ ಬರೋಬ್ಬರಿ 2.3 ಕೋಟಿ ಲೀಟರ್‌ಗೂ ಹೆಚ್ಚು ಕೃತಕ ಹಾಲನ್ನು ಇಡೀ ರಾಜ್ಯಾದ್ಯಂತ ಸರಬರಾಜು ಮಾಡಲಾಗಿದೆ ಎಂಬ ಆಘಾತಕಾರಿ ಮಾಹಿತಿ ತನಿಖೆಯಿಂದ ಹೊರಬಿದ್ದಿದೆ.

ಧಾರಾಶಿವ್ ಜಿಲ್ಲೆಯ ಭೂಮ್ ತಾಲೂಕಿನಲ್ಲಿ ಅಧಿಕಾರಿಗಳು ನಡೆಸಿದ ದಾಳಿಯ ವೇಳೆ ವಶಪಡಿಸಿಕೊಂಡ ದಾಖಲೆಗಳು ಮತ್ತು ವಸ್ತುಗಳು ತನಿಖಾಧಿಕಾರಿಗಳನ್ನೇ ಬೆಚ್ಚಿಬೀಳಿಸಿವೆ. ಆರೋಪಿಗಳು ಅಸಲಿ ಹಾಲಿನಂತೆಯೇ ಕಾಣುವಂತೆ ಮಾಡಲು ಮತ್ತು ಹಾಲಿನಲ್ಲಿ ಕೊಬ್ಬಿನಾಂಶ ಹೆಚ್ಚಿಸಲು ಕೆಲವು ಅಪಾಯಕಾರಿ ವಸ್ತುಗಳನ್ನು ಬಳಸುತ್ತಿದ್ದರು.

ಅವುಗಳೆಂದರೆ, ನಿರ್ಮಾ ಡಿಟರ್ಜೆಂಟ್ ಪೌಡರ್ (ಬಟ್ಟೆ ಒಗೆಯುವ ಸೋಪಿನ ಪುಡಿ), ಪಾಮ್ ಆಯಿಲ್, ಕಡಿಮೆ ಗುಣಮಟ್ಟದ ರಾಸಾಯನಿಕ ಪುಡಿ, ಕಳಪೆ ಗುಣಮಟ್ಟದ ಹಾಲಿನ ಪುಡಿ. ಕೇವಲ ಕಳೆದ 6 ತಿಂಗಳಲ್ಲಿ ಸುಮಾರು 2,30,470 ಕೆಜಿ ಕಳಪೆ ಹಾಲಿನ ಪುಡಿಯನ್ನು ಬಳಸಿ, ಸುಮಾರು 9.21 ಕೋಟಿ ರೂಪಾಯಿ ಮೌಲ್ಯದ 23,04,070 ಲೀಟರ್ ನಕಲಿ ಹಾಲನ್ನು ಇವರು ಉತ್ಪಾದಿಸಿದ್ದರು.

ದಾಳಿಯ ವೇಳೆ ಪತ್ತೆಯಾದ ದಾಖಲೆಗಳ ಆಧಾರದ ಮೇಲೆ ಅಧಿಕಾರಿಗಳ ಪ್ರಕಾರ, ಕಳೆದ 6 ತಿಂಗಳಲ್ಲಿ ಈ ನಕಲಿ ಹಾಲು ತಯಾರಿಗೆ ಸುಮಾರು 2.3 ಲಕ್ಷ ಕೆಜಿ ಕಳಪೆ ಗುಣಮಟ್ಟದ ಹಾಲಿನ ಪುಡಿಯನ್ನು ಬಳಸಲಾಗಿದೆ. ಈ ಪುಡಿ ಮತ್ತು ರಾಸಾಯನಿಕಗಳ ಸಹಾಯದಿಂದ ಸುಮಾರು 23.04 ಲಕ್ಷ ಲೀಟರ್ ಕೃತಕ ಹಾಲನ್ನು ನೇರವಾಗಿ ಉತ್ಪಾದಿಸಲಾಗಿದೆ. ಈ ನಕಲಿ ಹಾಲಿನ ಅಂದಾಜು ಮಾರುಕಟ್ಟೆ ಮೌಲ್ಯ ಬರೋಬ್ಬರಿ 9.21 ಕೋಟಿ ರೂಪಾಯಿಗಳಿಗಿಂತಲೂ ಅಧಿಕ ಎಂದು ಅಂದಾಜಿಸಲಾಗಿದೆ.

ಆರೋಪಿಗಳು ಕೃತಕ ಹಾಲನ್ನು ನೇರವಾಗಿ ಮಾರಾಟ ಮಾಡುತ್ತಿರಲಿಲ್ಲ. ಬದಲಿಗೆ, ಡೈರಿಗಳಿಗೆ ಸರಬರಾಜು ಮಾಡುವ ಮುನ್ನ ಪ್ರತಿ 100 ಲೀಟರ್ ಅಸಲಿ ಹಾಲಿಗೆ 10 ಲೀಟರ್ ಕೃತಕ ಹಾಲನ್ನು (ಶೇ. 10ರಷ್ಟು ಅನುಪಾತದಲ್ಲಿ) ಮಿಶ್ರಣ ಮಾಡುತ್ತಿದ್ದರು. ಹೀಗೆ ಅಸಲಿ ಹಾಲಿನೊಂದಿಗೆ ಈ ಕೃತಕ ಹಾಲನ್ನು ಬೆರೆಸಿದ್ದರಿಂದ, ಒಟ್ಟು ಕಲಬೆರಕೆ ಹಾಲಿನ ಪ್ರಮಾಣ 2.3 ಕೋಟಿ ಲೀಟರ್‌ಗಿಂತಲೂ ಅಧಿಕವಾಗಿ ಗ್ರಾಹಕರ ಮನೆಗಳನ್ನು ತಲುಪಿದೆ.

ಬಟ್ಟೆ ಒಗೆಯುವ ಸೋಪಿನ ಪೌಡರ್ ಮತ್ತು ರಾಸಾಯನಿಕಗಳು ಮನುಷ್ಯನ ದೇಹವನ್ನು ಸೇರಿದರೆ ಕಿಡ್ನಿ, ಲಿವರ್ ಮತ್ತು ಜೀರ್ಣಾಂಗ ವ್ಯವಸ್ಥೆಗೆ ತೀವ್ರ ಹಾನಿಯಾಗುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಅದರಲ್ಲೂ ಮಕ್ಕಳು, ಗರ್ಭಿಣಿಯರು ಮತ್ತು ವೃದ್ಧರ ಆರೋಗ್ಯದ ಮೇಲೆ ಇದು ಅತ್ಯಂತ ಗಂಭೀರ ಪರಿಣಾಮ ಬೀರುತ್ತದೆ. ಸಾರ್ವಜನಿಕರ ಆರೋಗ್ಯದೊಂದಿಗೆ ಆಟವಾಡುವ ಇಂತಹ ಜಾಲಗಳ ವಿರುದ್ಧ ಮಹಾರಾಷ್ಟ್ರ ಎಫ್‌ಡಿಎ ಕಠಿಣ ಕಾನೂನು ಕ್ರಮ ಕೈಗೊಂಡಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಏಳು ಜನರ ವಿರುದ್ಧ ಕಠಿಣ ಕಾನೂನು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆದರೆ, ಎಫ್‌ಐಆರ್ ದಾಖಲಾಗಿ ವಾರ ಕಳೆದರೂ ಎಲ್ಲಾ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ. ಭಾರತೀಯ ಆಹಾರ ಸುರಕ್ಷತಾ ಕಾಯ್ದೆಯಡಿ, ಜೀವಕ್ಕೆ ಕುತ್ತು ತರುವಂತಹ ಆಹಾರ ಕಲಬೆರಕೆ ದಂಧೆಯಲ್ಲಿ ತೊಡಗಿ ಅಪರಾಧ ಸಾಬೀತಾದರೆ, ಗರಿಷ್ಠ 10 ಲಕ್ಷ ರೂ. ದಂಡ ಮತ್ತು ಜೀವಾವಧಿ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಇದನ್ನೂ ಓದಿ : ಆ.15ರೊಳಗೆ 5927 ಗ್ರಾ.ಪಂ.ಗಳಿಗೆ ಮಹಾತ್ಮಾಗಾಂಧಿ ಹೆಸರು – ಈಶ್ವರ ಖಂಡ್ರೆ

Related posts

ಮುಂಬೈ ತೊರೆದು ಬೆಂಗಳೂರಿಗೆ ಹಾರ್ದಿಕ್‌ ಪಾಂಡ್ಯ ಶಿಫ್ಟ್‌..!

Kalpana Editor

ಬಿಜೆಪಿ ಶಾಸಕನ ಆಪ್ತನಿಗೆ ಚಾಕುವಿನಿಂದ ಇರಿತ..!

Kalpana Editor

ವಿಚ್ಛೇದನ ಅರ್ಜಿ ವಿಚಾರಣೆ ಹಂತದಲ್ಲೇ ‘ಶುಭ’ ಸುದ್ದಿ ಕೇಳಿಬಂತು..!

Kalpana Editor