ಭೋಪಾಲ್ : ಅಯೋಧ್ಯೆ ರಾಮಮಂದಿರದ ಕಾಣಿಕೆ ದುರ್ಬಳಕೆ ಆರೋಪದ ಬೆನ್ನಲ್ಲೇ, ಮಧ್ಯಪ್ರದೇಶದ ಪ್ರಸಿದ್ಧ ಮಾ ಬಾಗಲಾಮುಖಿ ದೇವಾಲಯದಲ್ಲೂ ಕಾಣಿಕೆ ಹಾಗೂ ದೇವಾಲಯದ ಆಸ್ತಿಯ ದುರ್ಬಳಕೆ ಆರೋಪ ಕೇಳಿಬಂದಿದೆ. ಈ ಪ್ರಕರಣ ಗಂಭೀರವಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಏಳು ದಿನಗಳೊಳಗೆ ತನಿಖೆ ಪೂರ್ಣಗೊಳಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ.
ಆಗರ್-ಮಾಲ್ವಾ ಜಿಲ್ಲೆಯ ನಲ್ಖೇಡಾದಲ್ಲಿರುವ ಮಾ ಬಾಗಲಾಮುಖಿ ದೇವಾಲಯಕ್ಕೆ ದೇಶದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ಪ್ರತಿವರ್ಷ ಕೋಟ್ಯಂತರ ರೂಪಾಯಿ ನಗದು, ಚಿನ್ನ ಮತ್ತು ಬೆಳ್ಳಿಯ ಕಾಣಿಕೆಗಳು ದೇವಾಲಯಕ್ಕೆ ಬರುತ್ತವೆ. ಇತ್ತೀಚೆಗೆ ಕಾಣಿಕೆಗಳ ನಿರ್ವಹಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
ಕಾಣಿಕೆ, ಅಮೂಲ್ಯ ಆಭರಣಗಳು ಹಾಗೂ ದೇವಾಲಯದ ಆಸ್ತಿ ನಿರ್ವಹಣೆಯಲ್ಲಿ ಪಾರದರ್ಶಕತೆ ಇಲ್ಲ ಎಂದು ದೂರು ನೀಡಲಾಗಿದೆ. ಕೆಲವು ವ್ಯಕ್ತಿಗಳು ಅಥವಾ ಸಮಿತಿಗಳು ದೇವಾಲಯದ ಆಸ್ತಿಯನ್ನು ದುರುಪಯೋಗ ಮಾಡಿಕೊಂಡಿರುವ ಶಂಕೆಯೂ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ದೇವಾಲಯದ ಲೆಕ್ಕಪತ್ರ, ಕಾಣಿಕೆ ಸಂಗ್ರಹ, ಚಿನ್ನ-ಬೆಳ್ಳಿ ವಸ್ತುಗಳ ದಾಖಲೆ ಹಾಗೂ ಆಡಳಿತದ ಕಾರ್ಯವೈಖರಿಯನ್ನು ಪರಿಶೀಲಿಸಲು ಜಿಲ್ಲಾಡಳಿತ ವಿಶೇಷ ತನಿಖೆಗೆ ಆದೇಶಿಸಿದೆ.
ಜಿಲ್ಲಾಧಿಕಾರಿಗಳು ಸಂಬಂಧಿತ ಅಧಿಕಾರಿಗಳಿಗೆ ಏಳು ದಿನಗಳೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ತನಿಖೆಯಲ್ಲಿ ಅಕ್ರಮ ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ : ಸಂಜೆ ಸ್ನಾಕ್ಸ್ಗೆ ಮಾಡಿ ಕ್ರಿಸ್ಪಿ ಮಶ್ರೂಮ್ ಪಕೋಡ
