ಕೆ.ಆರ್.ಪುರಂ : ಕೆ.ಆರ್.ಪುರಂ ಬಿಎಂಟಿಸಿ ಡಿಪೋ-29ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಚಾಲಕ ನಾಗರಾಜ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಸಹೋದ್ಯೋಗಿಗಳು ಪ್ರತಿಭಟನೆ ನಡೆಸಿದರು. ಡಿಪೋದಿಂದ ಬಸ್ಗಳನ್ನು ಲೈನ್ಗೆ ಬಿಡದೆ ನೂರಾರು ಚಾಲಕರು ಹಾಗೂ ನಿರ್ವಾಹಕರು ಪ್ರತಿಭಟನೆಯಲ್ಲಿ ಭಾಗವಹಿಸಿದರು.
ಜೂನ್ 22ರ ರಾತ್ರಿ ಸುಮಾರು 12 ಗಂಟೆಗೆ ಟಾಟಾ ಕಂಪನಿಯ ಚಾಲಕ ಚಂದ್ರು ಚಾಲನೆ ಮಾಡುತ್ತಿದ್ದ, ಬಸ್ನಿಂದ ಅಪಘಾತ ಸಂಭವಿಸಿದೆ ಎಂದು ಸಿಬ್ಬಂದಿ ಆರೋಪಿಸಿದ್ದಾರೆ. ಅಪಘಾತದಲ್ಲಿ ನಾಗರಾಜ್ ಅವರ ಬಲಗೈ ಮತ್ತು ಎಡಗಾಲಿಗೆ ತೀವ್ರ ಗಾಯಗಳಾಗಿದ್ದು, ಈಗಾಗಲೇ ಸುಮಾರು ಆರು ಶಸ್ತ್ರಚಿಕಿತ್ಸೆಗಳು ನಡೆದಿವೆ.
ವೈದ್ಯರ ಸಲಹೆಯಂತೆ ಕನಿಷ್ಠ ಒಂದು ವರ್ಷ ವಿಶ್ರಾಂತಿ ಅಗತ್ಯವಿರುವುದರಿಂದ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ. ಅಪಘಾತದ ವೇಳೆ ಅಧಿಕಾರಿಗಳು ಕೇವಲ ₹6,000 ನೀಡಿ ಕೈತೊಳೆದಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡ ಚಾಲಕನಿಗೆ ಟಾಟಾ ಕಂಪನಿ ಹಾಗೂ ಸಂಬಂಧಿತ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ. ನ್ಯಾಯಯುತ ಪರಿಹಾರ ಘೋಷಿಸುವವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಬಿಎಂಟಿಸಿ ಸಿಬ್ಬಂದಿ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ : ಉದ್ಯೋಗ ಭವನದ ಬಳಿಯ ಕಾರ್ಮಿಕ ಶಿಬಿರದಲ್ಲಿ ಭೀಕರ ಅಗ್ನಿ ಅವಘಡ..!
