ಬೆಂಗಳೂರು : ಸರ್ಕಾರದ ವಿರುದ್ಧ ಸಿಡಿದೆದ್ದಿರೋ ಬೀದಿ-ಬದಿ ವ್ಯಾಪಾರಿಗಳು, ತೆರವು ಕಾರ್ಯ ನಿಲ್ಲಿಸುವಂತೆ ಒತ್ತಾಯಿಸಿ ಇಂದು ಬಂದ್ಗೆ ಕರೆ ಕೊಟ್ಟಿದ್ದಾರೆ. ವ್ಯಾಪಾರ ವಹಿವಾಟು ಸ್ತಬ್ಧಗೊಳಿಸಿ ಹೋರಾಟಕ್ಕೆ ಮುಂದಾಗಿದ್ದಾರೆ. ಫುಟ್ಪಾತ್ ಒತ್ತುವರಿ ತೆರವಿನ ವಿರುದ್ಧ ಸಿಡಿದೆದ್ದಿರೋ ಬೀದಿಬದಿ ವ್ಯಾಪಾರಿಗಳು, ಕೂಡಲೇ ಸರ್ಕಾರ ಆದೇಶ ಹಿಂಪಡೆದು, ತೆರವು ಕಾರ್ಯ ನಿಲ್ಲಿಸುವಂತೆ ಒತ್ತಾಯಿಸಿ ಇಂದು ಬೃಹತ್ ಹೋರಾಟಕ್ಕೆ ಕರೆ ಕೊಟ್ಟಿದ್ದಾರೆ. ಹೀಗಾಗಿ ಇಂದು ತಮ್ಮ ವ್ಯಾಪಾರ ವಹಿವಾಟುಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಸಜ್ಜಾಗಿದ್ದಾರೆ.
ಕಳೆದೊಂದು ವಾರದಿಂದ ಬೆಂಗಳೂರಿನಲ್ಲಿ ಜಿಬಿಎ ಕೈಗೊಂಡಿರುವ ಕ್ಲೀನ್ ಫುಟ್ಪಾತ್ ಕಾರ್ಯಾಚರಣೆ ಬೀದಿ ಬದಿ ವ್ಯಾಪಾರಿಗಳ ನಿದ್ದೆಗೆಡಿಸಿದೆ. ಜೀವನೋಪಾಯಕ್ಕೆ ಕಾರ್ಯಾಚರಣೆ ತೊಂದರೆ ಎಂಬ ಕಾರಣಕ್ಕೆ ಜಿಬಿಎ ವಿರುದ್ಧ ಸಿಡಿದೆದ್ದಿರುವ ವ್ಯಾಪಾರಿಗಳು ಇಂದು ಹೋರಾಟದ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ತಯಾರಿ ಮಾಡಿಕೊಂಡಿವೆ. ಇಂದು ತಮ್ಮ ವ್ಯಾಪಾರ ವಹಿವಾಟುಗಳನ್ನ ಬಂದ್ ಮಾಡಲು ನಿರ್ಧಾರ ಮಾಡಿದ್ದು, ಫ್ರೀಡಂ ಪಾರ್ಕ್ನಲ್ಲಿ ಹೋರಾಟಕ್ಕೆ ಮುಂದಾಗಿದ್ದಾರೆ.
ನಗರದ ಪ್ರಮುಖ ಮಾರುಕಟ್ಟೆಗಳಾದ ಕೆ.ಆರ್ ಮಾರ್ಕೆಟ್, ಸಾರಕ್ಕಿ ಮಾರ್ಕೆಟ್, ಜಯನಗರ ಮಾರ್ಕೆಟ್, ಗಾಂಧಿ ಬಜಾರ್, ಬನಶಂಕರಿ, ಮಲ್ಲೇಶ್ವರ, ಮಹದೇವಪುರ, ಆರ್ ಆರ್ ನಗರ ಸೇರಿದಂತೆ ಹಲವು ಕಡೆ ಬೆಳಗ್ಗೆಯಿಂದಲೇ ವ್ಯಾಪಾರಿಗಳು ತಮ್ಮ ವ್ಯಾಪಾರ ನಿಲ್ಲಿಸಲು ನಿರ್ಧರಿಸಿದ್ದಾರೆ.
6 ಸಂಘಟನೆಗಳು ಒಟ್ಟಾಗಿ ಕರೆಕೊಟ್ಟಿರುವ ಪ್ರತಿಭಟನೆ ಸಂಬಂಧ ಮಂಗಳವಾರದಿಂದಲೇ ಸಂಘಟನಾಕಾರರು ನಗರದ ಬೀದಿ ಬದಿ ವ್ಯಾಪಾರಿಗಳನ್ನ ಭೇಟಿಯಾಗಿ ಪ್ರತಿಭಟನೆಯಲ್ಲಿ ಭಾಗಿಯಾಗುವಂತೆ ಮನವಿ ಮಾಡಿದ್ದು, ಇಂದು ಬೀದಿ ಬದಿಯಲ್ಲಿ ಸಿಗುವ ಅಗತ್ಯ ವಸ್ತುಗಳ ಖರೀದಿ ಮಾಡುವವರಿಗೆ ಕೊಂಚ ಸಮಸ್ಯೆಯಾಗುವ ಸಾಧ್ಯತೆ ಇದೆ.
ಇತ್ತ 6 ಸಂಘಟನೆಗಳು ಒಟ್ಟಾಗಿ ಜಿಬಿಎ ವಿರುದ್ಧ ಸಮರ ಸಾರಿದರೆ ಕೆಲ ಸಂಘಟನೆಗಳು ಈ ಹೋರಾಟಕ್ಕೆ ಬೆಂಬಲ ಕೊಟ್ಟಿಲ್ಲ. ಇಂದಿನ ಹೋರಾಟಕ್ಕೆ ನಮ್ಮ ಬೆಂಬಲ ಇಲ್ಲ ಎಂದು ಬಹಿರಂಗ ಘೋಷಣೆ ಮಾಡಿರುವ ಸಂಘಟಕರು, ಎಂದಿನಂತೆ ತಮ್ಮ ವ್ಯಾಪಾರ ವಹಿವಾಟುಗಳನ್ನ ಮುಂದುವರೆಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ : ಹಾಸನದಲ್ಲಿ ಮಳೆಯಬ್ಬರ – ಹೇಮಾವತಿ ಜಲಾಶಯದ ಒಳಹರಿವು ಹೆಚ್ಚಳ..!
