ತಿರುವನಂತಪುರ : ತಮಿಳುನಾಡು ಮೇಕೆದಾಟು ಕ್ಯಾತೆ ಬೆನ್ನಲ್ಲೇ ಇತ್ತ ಕೇರಳ ಸರ್ಕಾರ ಬಂಡೀಪುರ ರಕ್ಷಿತಾರಣ್ಯದಲ್ಲಿ ರಾತ್ರಿ ಸಂಚಾರದ ಮೇಲಿನ ನಿಷೇಧ ತೆರವು ಮಾಡುವಂತೆ ಕೋರಿದೆ. ಈ ಸಂಬಂಧ ಕೇರಳ ಸಿಎಂ ವಿ.ಡಿ.ಸತೀಶನ್ ಅವರು ಸಿಎಂ ಡಿ.ಕೆ.ಶಿವಕುಮಾರ್ ಜೊತೆ ಚರ್ಚೆಗೆ ಮುಂದಾಗಿದ್ದಾರೆ.
ನಿಷೇಧ ಹಿಂಪಡೆಯುವಂತೆ ಈ ಹಿಂದೆ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ಮನವಿ ಮಾಡಿದ್ದರು. ಇದೀಗ ಎರಡೂ ರಾಜ್ಯಗಳಲ್ಲಿ ಹೊಸದಾಗಿ ಕಾಂಗ್ರೆಸ್ ಸರ್ಕಾರಗಳು ಅಧಿಕಾರಕ್ಕೆ ಬಂದಿರುವುದರಿಂದ ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿರುವ ಈ ಸಮಸ್ಯೆಗೆ ಪರಿಹಾರ ಸಿಗಬಹುದು ಎನ್ನುವ ಲೆಕ್ಕಾಚಾರದಲ್ಲಿ ಕೇರಳ ಸರ್ಕಾರವಿದೆ.
ವಿ.ಡಿ.ಸತೀಶನ್ ಈ ಕುರಿತು ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ. ಈ ಸಮಸ್ಯೆಗೆ ಪ್ರಿಯಾಂಕಾ ಗಾಂಧಿ ಕೂಡ ಬೆಂಬಲ ನೀಡುವ ಸಾಧ್ಯತೆಯಿದೆ.
ಈಗಾಗಲೇ ಕೇರಳದ ಹಿರಿಯ ಸಂಸದ ರಾಘವನ್, ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚೆ ನಡೆಸಿದ್ದು ಸಕರಾತ್ಮಕ ಸ್ಪಂದನೆ ಸಿಕ್ಕಿದೆ. ಮೇಲ್ಸೇತುವೆ ನಿರ್ಮಾಣದಂತಹ ಶಾಶ್ವತ ಪರಿಹಾರಗಳ ಬಗ್ಗೆ ಕೇರಳ ಮತ್ತು ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ : ಕಾಂಗ್ರೆಸ್ ಜೊತೆ ವಿಲೀನಕ್ಕೆ ಠಾಕ್ರೆ ಪ್ಲಾನ್ ಎಂದ 6 ಬಂಡಾಯ ಸಂಸದರು
