ತಿರುವನಂತಪುರಂ : ವಯನಾಡಿನ ಮೆಪ್ಪಾಡಿಯಲ್ಲಿ ಸಂಭವಿಸಿದ ಭಾರೀ ಭೂಕುಸಿತ ದುರಂತದಲ್ಲಿ ಇಬ್ಬರು ಕಾರ್ಮಿಕರು ಜೀವಂತ ಸಮಾಧಿಯಾಗಿದ್ದಾರೆ. ಸುಮಾರು 30 ಮಂದಿ ನಾಪತ್ತೆಯಾಗಿದ್ದು, 18 ಮಂದಿ ಭೂಗತದಲ್ಲೇ ಲಾಕ್ ಆಗಿದ್ದಾರೆ. ದುರಂತದ ಬೆನ್ನಲ್ಲೇ ಸಿಎಂ ವಿ.ಡಿ ಸತೀಶನ್ ತುರ್ತು ಸಭೆ ನಡೆಸಿದ್ದಾರೆ.

ಕೃಷಿ ಸಚಿವ ಟಿ. ಸಿದ್ದಿಕ್ ಹಾಗೂ ಕಂದಾಯ ಸಚಿವ ಎ.ಪಿ. ಅನಿಲ್ಕುಮಾರ್ ಅವರೊಂದಿಗೆ ತುರ್ತು ಸಭೆ ನಡೆಸಿದ್ದು, ರಕ್ಷಣಾ ಕಾರ್ಯಾಚರಣೆ ಸಂಘಟಿಸಲು ಸೂಚಿಸಿದ್ದಾರೆ. ಇಬ್ಬರನ್ನೂ ಕೂಡಲೇ ವಯನಾಡಿಗೆ ತೆರಳುವಂತೆ ಸತೀಶನ್ ಸೂಚನೆ ನೀಡಿದ್ದಾರೆ. ಜೊತೆಗೆ ಮೀನಂಗಡಿಯ ಎನ್ಡಿಎಆರ್ಎಫ್ ಘಟಕದೊಂದಿಗೆ ಕೋಝಿಕ್ಕೋಡ್ ತಂಡವನ್ನೂ ವಯನಾಡಿಗೆ ತೆರಳಿ ರಕ್ಷಣಾ ಕಾರ್ಯ ನಡೆಸುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ.
ವಯನಾಡಿನ ಮೆಪ್ಪಾಡಿಯಲ್ಲಿ ಭಾರೀ ಮಳೆಯಿಂದಾಗಿ ಸುರಂಗ ನಿರ್ಮಾಣ ಪ್ರದೇಶದ ಮೀನಾಕ್ಷಿ ಸೇತುವೆ ಬಳಿ ಭೂಕುಸಿತ ಸಂಭವಿಸಿದೆ. ಘಟನೆ ವೇಳೆ ಸ್ಥಳದಲ್ಲಿದ್ದ ಇಬ್ಬರು ಕಾರ್ಮಿಕರು ಜೀವಂತ ಸಮಾಧಿಯಾಗಿದ್ದಾರೆ. 24 ಗಂಟೆಯಲ್ಲಿ 265 ಮಿಮಿ ನಷ್ಟು ಮಳೆಯಾದ್ದ ಕಾರಣ, ಸುರಂಗ ರಸ್ತೆಗೆ ನಿರ್ಮಿಸಲಾಗಿದ್ದ ಕಾಂಕ್ರೀಟ್ ಗೋಡೆ ಸಂಪೂರ್ಣ ಕುಸಿದಿದೆ. ಭಾರೀ ಮಳೆಯಿಂದಾಗಿ ನಿನ್ನೆಯೇ ನಿರ್ಮಾಣ ಕಾರ್ಯ ನಿಲ್ಲಿಸಲಾಗಿತ್ತು.
ಆದರೆ, ಭೂಕುಸಿತದ ವೇಳೆ ಸಮೀಪದಲ್ಲಿ ಸಾಗುತ್ತಿದ್ದ ಜನರು ಅಪಘಾತಕ್ಕೆ ಸಿಲುಕಿದ್ದಾರೆ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಭೂಕುಸಿತದಿಂದ ಅನೇಕರು ಇನ್ನೂ ನೆಲದಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಆದ್ರೆ ಮಣ್ಣು ಇನ್ನೂ ಕುಸಿಯುತ್ತಿರುವ ಕಾರಣ ರಕ್ಷಣಾ ಕಾರ್ಯಾಚರಣೆ ಸವಾಲಾಗಿದೆ ಎಂದು ವಾರ್ಡ್ ಸದಸ್ಯ ಜಿತಿನ್ ಮೆಪ್ಪಾಡಿ ಹೇಳಿದ್ದಾರೆ. ಇದನ್ನೂ ಓದಿ : ಬಿರುಗಾಳಿ ಸಹಿತ ಭಾರೀ ಮಳೆ; ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಘೋಷಣೆ..!
