August 27, 2026
kranthikidi.com
ತಾಜಾಸುದ್ದಿದೇಶ

ಭಾರೀ ಮಳೆಗೆ ಕುಸಿದ ರಸ್ತೆ, ಅಪ್ಪಳಿಸಿದ ಪ್ರವಾಹ; ಮುಂಬೈ-ಪುಣೆ ಸಂಪರ್ಕ ಕಟ್‌

ಮುಂಬೈ : ಮುಂಗಾರು ಮಳೆ ಚುರುಕು ಪಡೆದುಕೊಂಡಿದ್ದು, ಮುಂಬೈನಲ್ಲಂತೂ ಮಳೆ ರೌದ್ರನರ್ತನ ತಾಳಿದ್ದು, ಹಲವೆಡೆ ಅವಾಂತರಗಳು ಸೃಷ್ಟಿಯಾಗಿವೆ. ಭಾರೀ ಮಳೆಯಿಂದಾಗಿ ಮುಂಬೈನಲ್ಲಿ ನೆನ್ನೆ (ಭಾನುವಾರ) ಒಂದೇ ದಿನ ವಿವಿಧೆಡೆ 8 ಮಂದಿ ಬಲಿಯಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಮುಂಖುರ್ಡ್‌ ಪ್ರದೇಶದಲ್ಲಿ ಚಾಲ್‌ ಕಟ್ಟದ ಒಂದು ಭಾಗ ಕುಸಿದು 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ ಮರ ಬಿದ್ದು ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿದ್ರೆ, ಕಟ್ಟಡದ ಗ್ರಿಲ್ ಪಾದಚಾರಿ ಮಾರ್ಗದ ಮೇಲೆ ಬಿದ್ದು ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ.

ಇಂದು (ಸೋಮವಾರ) ಸಹ ಮಳೆಯ ಆರ್ಭಟ ಮುಂದುವರಿದಿದ್ದು, ಹಲವೆಡೆ ಭೂಕುಸಿತ, ಪ್ರವಾಹ ಉಂಟಾಗಿದೆ. ಇದರಿಂದ ಹಲವು ರೈಲು ಮಾರ್ಗಗಳ ಸಂಚಾರ ಸ್ಥಗಿತಗೊಂಡಿದೆ. ಕೆಲ ರೈಲುಗಳ ಮಾರ್ಗಗಳಲ್ಲಿ ಏಕಾಏಕಿ ಬದಲಾವಣೆ ಮಾಡಲಾಗಿದೆ. ಮುಂಬೈ – ಪುಣೆ ಎಕ್ಸ್‌ ಪ್ರೇಸ್‌ ವೇನಲ್ಲೂ ತೀವ್ರ ಹಾನಿಯಾಗಿರುವುದರಿಂದ ಸಂಚಾರ ಬಂದ್‌ ಮಾಡಲಾಗಿದ್ದು, ಸದ್ಯಕ್ಕೆ ಮುಂಬೈ, ಪುಣೆ ಸಂಪರ್ಕ ಕಡಿತಗೊಂಡಿದೆ. ಇದರಿಂದ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. 16 ರೈಲುಗಳ ಸಂಚಾರ ರದ್ದು, ಭಾರೀ ಮಳೆಯ ಕಾರಣ ನಗರಕ್ಕೆ ಹಾಗೂ ನಗರದಿಂದ ಸಂಪರ್ಕ ಕಲ್ಪಿಸುವ 16 ರೈಲುಗಳ ಸಂಚಾರವನ್ನ ರದ್ದುಗೊಳಿಸಲಾಗಿದೆ. 9 ರೈಲು ಮಾರ್ಗವನ್ನ ಬದಲಾವಣೆ ಮಾಡಲಾಗಿದೆ.

ಎಲ್ಲೆಲ್ಲಿ ಏನೇನು ಅನಾಹುತ? – ಇಂದು ಬೆಳಗಿನ ಜಾವ 3.05 ರ ಸುಮಾರಿಗೆ, ಕರ್ಜತ್-ಲೋನಾವಾಲ ಭೋರ್ ಘಾಟ್ ವಿಭಾಗದ ಠಾಕೂರ್ವಾಡಿ ಬಳಿ ಭೂಕುಸಿತ ಸಂಭವಿಸಿದೆ. ನಂತರ ಖಂಡಾಲಾ ಮತ್ತು ಮಂಕಿ ಹಿಲ್ ನಡುವೆ ಮತ್ತೊಂದು ಭೂಕುಸಿತ ಸಂಭವಿಸಿದೆ. ಭೋರ್ ಘಾಟ್ ಪ್ರದೇಶದ ಸವಾಲಿನ 3 ರೈಲು ಹಳಿಗಳು – ಮುಂಬೈ ಕಡೆಗೆ ಅಪ್ ಲೈನ್, ಪುಣೆ ಕಡೆಗೆ ಡೌನ್ ಲೈನ್ ಮತ್ತು ಮಧ್ಯ ಮಾರ್ಗದಲ್ಲಿ ನಿರಂತರ ಮಳೆಯಿಂದ ಭೂಕುಸಿತ ಸಂಭವಿಸಿದೆ.

ಕರ್ಜತ್ ಮತ್ತು ಲೋನಾವಾಲ ನಡುವಿನ ಆಗ್ನೇಯ ಘಾಟ್ ವಿಭಾಗದಲ್ಲಿ ನಿರಂತರ ಮಳೆಯಿಂದಾಗಿ, ಮುಂಬೈ ವಿಭಾಗದ ಅಪ್ ಮೇನ್ ಲೈನ್‌ನಲ್ಲಿ ಠಾಕೂರ್ವಾಡಿ ಮತ್ತು ಮಂಕಿ ಹಿಲ್ ಲೂಪ್ ಕ್ಯಾಬಿನ್ ನಡುವೆ ಭೂಕುಸಿತ ಸಂಭವಿಸಿದೆ. ಈ ಅಡಚಣೆಯಿಂದಾಗಿ ಕೇಂದ್ರ ರೈಲ್ವೆ ಇಲಾಖೆಯು ಹಲವಾರು ದೂರದ ಸೇವೆಗಳನ್ನ ರದ್ದುಗೊಳಿಸಿದೆ. ಅಗತ್ಯ ಇರುವ ಕಡೆಗೆ ಮಾರ್ಗಗಳನ್ನು ಬದಲಾಯಿಸಲು ಮತ್ತು ಪರಿಸ್ಥಿತಿಯನ್ನು ನಿಯಂತ್ರಿಸಲು ಕ್ರಮ ಕೈಗೊಂಡಿದೆ.

ಯಾವ್ಯಾವ ರೈಲುಗಳು ರದ್ದು? – ಸಿಎಸ್‌ಎಂಟಿ-ಪುಣೆ ಇಂದ್ರಯಾಣಿ ಎಕ್ಸ್‌ಪ್ರೆಸ್, ಇಂಟರ್‌ಸಿಟಿ ಎಕ್ಸ್‌ಪ್ರೆಸ್, ಡೆಕ್ಕನ್ ಎಕ್ಸ್‌ಪ್ರೆಸ್, ಡೆಕ್ಕನ್ ಕ್ವೀನ್, ಪ್ರಗತಿ ಎಕ್ಸ್‌ಪ್ರೆಸ್ ಮತ್ತು ಧುಲೆ ಎಕ್ಸ್‌ಪ್ರೆಸ್, ಪುಣೆ-ಸಿಎಸ್‌ಎಂಟಿ ಸಿಂಹಗಡ್ ಎಕ್ಸ್‌ಪ್ರೆಸ್ ಸೇರಿದಂತೆ ಹೆಚ್ಚುವರಿ ಸೇವೆಗಳನ್ನೂ ಸಹ ರದ್ದುಗೊಳಿಸಲಾಗಿದೆ. ಇದಲ್ಲದೇ ಸುಮಾರು 9 ರೈಲುಗಳ ಮಾರ್ಗವನ್ನ ಬದಲಾವಣೆ ಮಾಡಲಾಗಿದೆ ಎಂದು ಕೇಂದ್ರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸ್ವಪ್ನಿಲ್ ನೀಲಾ ತಿಳಿಸಿದ್ದಾರೆ. ಇದನ್ನೂ ಓದಿ : ಯತೀಂದ್ರ ಖಾತೆ ಬದಲಾವಣೆಗೆ ಆಗ್ರಹ – ನೈಜ ಹೋರಾಟಗಾರರ ವೇದಿಕೆಯಿಂದ ಸಿಎಂಗೆ ಪತ್ರ..!

Related posts

ಒಂದು ಸಣ್ಣ ತಪ್ಪು 40 ದಿನ ಬೆಡ್‌ ರೆಸ್ಟ್‌ಗೆ ಜಾರಿದ ರಕುಲ್ ಪ್ರೀತ್ ಸಿಂಗ್‌

Kalpana Editor

ಇಂದಿರಾ ಕ್ಯಾಂಟೀನ್​​ಗಳ ಅಡುಗೆ ಮನೆಯಲ್ಲಿ ಇಲಿ, ಹೆಗ್ಗಣ; ಹೌಹಾರಿದ ಅಧಿಕಾರಿಗಳು

kknewskannada1987@gmail.com

ಸ್ವರಲೋಕದ ದಿವ್ಯ ಚೇತನಕ್ಕೆ ಕಣ್ಣೀರಿನ ನಮನ; ಜಾನಕಿ ಅಂತಿಮ ದರ್ಶನಕ್ಕೆ ಹರಿದುಬಂದ ಅಭಿಮಾನಿ ಸಾಗರ

Kalpana Editor