July 12, 2026
kranthikidi.com
ತಾಜಾಸುದ್ದಿರಾಜ್ಯ

ತಮಿಳುನಾಡಿನಲ್ಲಿ ಹುಟ್ಟುವ ಮಕ್ಕಳಿಗೆ 1 ಗ್ರಾಂ ಉಂಗುರ; ಷರತ್ತುಗಳೇನು..?

ಚೆನ್ನೈ : ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ತಮಿಳುನಾಡಿನ ವಿಜಯ್‌ ಸರ್ಕಾರವು ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ಪ್ರತಿಯೊಂದು ನವಜಾತ ಶಿಶುವಿಗೆ 1 ಗ್ರಾಂ ಚಿನ್ನದ ಉಂಗುರವನ್ನು ಉಚಿತವಾಗಿ ನೀಡುವ ತೈಮಾಮನ್‌ ತಂಗ ಮೋತಿರಾಂ ತಿಟ್ಟಂ ಎಂಬ ಐತಿಹಾಸಿಕ ಯೋಜನೆಯನ್ನು ಪ್ರಕಟಿಸಿದೆ.

ತಮಿಳುನಾಡಿನಲ್ಲಿ ಶಾಶ್ವತವಾಗಿ ವಾಸಿಸುತ್ತಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ಎಲ್ಲಾ ಮಕ್ಕಳಿಗೆ ಈ ಯೋಜನೆ ಅನ್ವಯಿಸುತ್ತದೆ. ಮುಖ್ಯಮಂತ್ರಿ ವಿಜಯ್ ಅವರ ಜನ್ಮದಿನವಾದ ಜೂನ್ 22 ರಿಂದ ಪೂರ್ವಾನ್ವಯವಾಗುವಂತೆ ಈ ಯೋಜನೆ ಜಾರಿಗೆ ಬರಲಿದೆ. ಮಾಜಿ ಮುಖ್ಯಮಂತ್ರಿ ಸಿ.ಎನ್. ಅಣ್ಣಾದುರೈ ಅವರ ಜನ್ಮದಿನವಾದ ಸೆಪ್ಟೆಂಬರ್ 15 ರಂದು ಈ ಯೋಜನೆಗೆ ಅಧಿಕೃತವಾಗಿ ಚಾಲನೆ ಸಿಗಲಿದೆ.

ಪ್ರಸ್ತುತ ಮಾರುಕಟ್ಟೆ ದರದ ಪ್ರಕಾರ ಸುಮಾರು 13,600 ರೂ. ಮೌಲ್ಯದ 1 ಗ್ರಾಂ ಚಿನ್ನದ ಉಂಗುರವನ್ನು ಶಿಶುಗಳಿಗೆ ನೀಡಲಾಗುತ್ತದೆ. ಈ ಯೋಜನೆಗಾಗಿ ಸರ್ಕಾರವು ವಾರ್ಷಿಕವಾಗಿ 755.83 ಕೋಟಿ ರೂ. ಹಣವನ್ನು ಮೀಸಲಿಟ್ಟಿದೆ.

ತಮಿಳುನಾಡಿನಲ್ಲಿ ಮಗು ಜನಿಸಿದಾಗ ಮನೆಗೆ ಬರಮಾಡಿಕೊಳ್ಳಲು ಸೋದರ ಮಾವನ ಕಡೆಯಿಂದ ಚಿನ್ನದ ಉಡುಗೊರೆ ನೀಡುವ (ತೈಮಾಮನ್ ಸೀರ್) ಪದ್ಧತಿ ಇದೆ. ಈಗ ಸರ್ಕಾರವೇ ಸಾಂಕೇತಿಕವಾಗಿ ಆ ಸೋದರ ಮಾವನ ಜವಾಬ್ದಾರಿಯನ್ನು ಹೊತ್ತು, ಪ್ರತಿ ಮಗುವಿಗೆ ಪ್ರೀತಿ ಈ ಚಿನ್ನದ ಉಂಗುರವನ್ನು ನೀಡಲು ಮುಂದಾಗಿದೆ.

ಚಿನ್ನದ ಉಂಗುರದ ಆಕರ್ಷಣೆಯಿಂದಾಗಿ ಗ್ರಾಮೀಣ ಹಾಗೂ ಬಡ ಕುಟುಂಬಗಳು ಹೆರಿಗೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಸಾಲ ಮಾಡುವುದು ತಪ್ಪುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸುರಕ್ಷಿತ ಹೆರಿಗೆಗಳನ್ನು ಉತ್ತೇಜಿಸುವುದು ಮತ್ತು ನವಜಾತ ಶಿಶು ಹಾಗೂ ತಾಯಂದಿರನ್ನು ಗೌರವಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.

ಗಂಡು ಮಗು ಅಥವಾ ಹೆಣ್ಣು ಮಗು ಎಂಬ ಯಾವುದೇ ಭೇದವಿಲ್ಲದೆ ಎಲ್ಲರಿಗೂ ಈ ಉಂಗುರ ಸಿಗಲಿದೆ. ಕುಟುಂಬದ ಎಷ್ಟನೇ ಮಗುವಾಗಿದ್ದರೂ (ಮೊದಲ, ಎರಡನೇ ಅಥವಾ ಮೂರನೇ ಮಗು) ಈ ಯೋಜನೆಯ ಲಾಭ ಪಡೆಯಬಹುದು. ಫಲಾನುಭವಿಗಳು ತಮಿಳುನಾಡಿನ ನಿವಾಸಿಗಳಾಗಿರಬೇಕು ಮತ್ತು ಅದಕ್ಕಾಗಿ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿಯನ್ನು ಒದಗಿಸಬೇಕಾಗುತ್ತದೆ.

ತಮಿಳುನಾಡು ನಿವಾಸಿಯಾಗಿದ್ದರೂ, ಹೆರಿಗೆಯು ಯಾವುದೇ ಖಾಸಗಿ ನರ್ಸಿಂಗ್ ಹೋಮ್ ಅಥವಾ ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ನಡೆದರೆ ಈ ಯೋಜನೆಯ ಲಾಭ ಸಿಗುವುದಿಲ್ಲ. ಯೋಜನೆಯಡಿ ಕೇವಲ 1 ಗ್ರಾಂ ತೂಕದ ಅಧಿಕೃತ ಚಿನ್ನದ ಉಂಗುರವನ್ನು ಮಾತ್ರ ನೀಡಲಾಗುತ್ತದೆ. ಅದರ ಬದಲಿಗೆ ನಗದು ಹಣವನ್ನು ಪಡೆಯಲು ಯಾವುದೇ ಅವಕಾಶ ಇರುವುದಿಲ್ಲ

ತಮಿಳುನಾಡಿನಲ್ಲಿ ವರ್ಷಕ್ಕೆ 7.8 ಲಕ್ಷ ಮಕ್ಕಳ ಜನನವಾಗುತ್ತಿದ್ದು, ಈ ಪೈಕಿ 4.2 ಲಕ್ಷ ಜನನನ ಸರ್ಕಾರಿ ಆಸ್ಪತ್ರೆಗಳಲ್ಲಿ ಆಗುತ್ತಿವೆ. ಖಾಸಗಿ ಆಸ್ಪತ್ರೆಗಳಲ್ಲಿ ಹೆರಿಗೆಗೆ ಸರಾಸರಿ 63 ಸಾವಿರ ರೂ. ಖರ್ಚಿದ್ದರೆ ಸರ್ಕಾರಿ ಆಸ್ಪತ್ರೆಗಳಲ್ಲಿ 1,300 ರೂ. ಆಗುತ್ತದೆ. ಇದನ್ನೂ ಓದಿ : ಮಂತ್ರಾಲಯ ರಾಯರ ಮಠದ ಕಾಣಿಕೆ ಹುಂಡಿ ಎಣಿಕೆ; 21 ದಿನದಲ್ಲಿ ಕೋಟಿ ಹಣ ಸಂಗ್ರಹ..!

Related posts

ಸ್ಥಾನಮಾನ ಹೆಚ್ಚಾದಂತೆ ವಿರೋಧಿಗಳೂ ಹೆಚ್ಚಾಗುತ್ತಾರೆ; ವಿವಾದದಲ್ಲಿ ರಣವೀರ್‌ಗೆ ಕಂಗನಾ ಬೆಂಬಲ..!

Kalpana Editor

ನಾಳೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡುವುದು ಅಧಿಕೃತ..!

Kalpana Editor

ಡೈರೆಕ್ಟರ್‌ ಬರ್ತ್‌ಡೇ ದಿನವೇ ‘ಟಾಕ್ಸಿಕ್ ಮೇಕಿಂಗ್’ ವಿಡಿಯೋ ರಿಲೀಸ್..!

Kalpana Editor