ರಾಜ್ಯ ಸರ್ಕಾರ ಲೇಔಟ್ ಹಾಗೂ ಕೈಗಾರಿಕೆ ಸ್ಥಾಪಿಸಲು ಬಂಜರು ಜಮೀನುಗಳನ್ನು ಆಯ್ಕೆ ಮಾಡಬೇಕು. ಅಥವಾ ಉತ್ತರ ಕರ್ನಾಟಕದ ಕಡೆಗೆ ಅಭಿವೃದ್ಧಿ ಯೋಜನೆಗಳನ್ನು ಕೊಂಡೊಯ್ಯಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು. ಆನೇಕಲ್ ತಾಲೂಕಿನ ಸರ್ಜಾಪುರದಲ್ಲಿ ಕೆಐಎಡಿಬಿ ಭೂ ಸ್ವಾಧೀನ ವಿರುದ್ಧ ನಡೆಯುತ್ತಿರುವ ರೈತರ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೆಐಎಡಿಬಿಯಿಂದ ರೈತರ ಜಮೀನುಗಳನ್ನು ಕಬಳಿಸಲಾಗುತ್ತಿದೆ. ಆದರೆ ಇದು ಕೋರ್ಟ್ನಲ್ಲಿ ವಿಚಾರಣೆಯಾಗಿ ವಜಾ ಆದರೂ ಮತ್ತೆ ನೋಟಿಸ್ ನೀಡಲಾಗಿದೆ.
ಅನೇಕ ರೈತರು ಸಣ್ಣ ಜಮೀನುಗಳನ್ನು ಹೊಂದಿದ್ದಾರೆ. ರೇಷ್ಮೆ ಹಾಗೂ ತರಕಾರಿ ಬೆಳೆಗಳನ್ನು ರೈತರು ಇಲ್ಲಿ ಬೆಳೆಯುತ್ತಿದ್ದಾರೆ. ಸರ್ಕಾರ ಕೈಗಾರಿಕೆ ಆರಂಭಿಸಲು ಬಂಜರು ಜಮೀನುಗಳನ್ನು ಆಯ್ಕೆ ಮಾಡಬೇಕು. ಫಲವತ್ತಾದ ಕೃಷಿ ಭೂಮಿಯಲ್ಲಿ ಕೈಗಾರಿಕೆ ಸ್ಥಾಪಿಸಬಾರದು. ಒಂದೇ ಕಡೆ ಒತ್ತಡ ಹೇರುವುದರ ಬದಲು ಉತ್ತರ ಕರ್ನಾಟಕದ ಕಡೆ ಕೈಗಾರಿಕೆ ಆರಂಭಿಸಬಹುದು. ಪದೇ ಪದೆ ಬೆಂಗಳೂರು ಹಾಗೂ ಸುತ್ತಮುತ್ತ ಲೇಔಟ್ ನಿರ್ಮಿಸಲು ಸರ್ಕಾರ ಯೋಜನೆ ರೂಪಿಸುತ್ತಿದೆ. ಇದರಿಂದಾಗಿ ಬೋರ್ವೆಲ್, ಕೆರೆಗಳು ಹಾಳಾಗುತ್ತದೆ ಎಂದರು.

ಈ ಭಾಗದಲ್ಲಿ ಈಗಾಗಲೇ ಕೈಗಾರಿಕೆ ಇದೆ, ಐಟಿ ಕಂಪನಿಗಳಿವೆ. ಟ್ರಾಫಿಕ್ ಜಾಮ್ ಕೂಡ ಅಧಿಕವಾಗಿದೆ. ಮತ್ತೆ ಕೈಗಾರಿಕೆ ಆರಂಭಿಸಿದರೆ ಇನ್ನಷ್ಟು ಸಮಸ್ಯೆ ಉಂಟಾಗುತ್ತದೆ. ಇಲ್ಲಿ ಲೇಔಟ್ ನಿರ್ಮಿಸಿದರೆ ಕಮಿಶನ್ ಬರುತ್ತದೆ ಎಂಬ ಕಾರಣಕ್ಕೆ ತರಾತುರಿಯಲ್ಲಿ ಮಾಡಲಾಗುತ್ತಿದೆ. ಈ ಸರ್ಕಾರ ಟೆಂಡರ್ ಕರೆದು ಕಮಿಶನ್ ವಸೂಲಿ ಮಾಡುತ್ತಿದೆ. ಕಾಂಗ್ರೆಸ್ ಹೈಕಮಾಂಡ್ಗೆ ಕಮಿಶನ್ ನೀಡಲು ಫಂಡ್ ರೈಸ್ ಮಾಡಲಾಗುತ್ತಿದೆ.
ಬಿಡದಿ ಹಾಗೂ ಸರ್ಜಾಪುರದಲ್ಲಿ ಕಾಂಗ್ರೆಸ್ನ ಫಂಡ್ ರೈಸಿಂಗ್ ಲೇಔಟ್ ನಿರ್ಮಿಸಲಾಗುತ್ತಿದೆ. ಕಾಂಗ್ರೆಸ್ಗೆ ರೈತರು ಬೇಕಾಗಿಲ್ಲ. ಬಾಂಗ್ಲಾ ನಿವಾಸಿಗಳಿಗೆ ವೋಟರ್ ಐಡಿ ಮಾಡಿಸಿಕೊಟ್ಟು ಮತ ಪಡೆಯಲಾಗುತ್ತದೆ ಎಂದರು. ರೈತರ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆ. ಈ ರೀತಿ ರೈತರ ಮೇಲೆ ಹಲ್ಲೆ ಮಾಡಬಾರದು. ಈ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪ ಮಾಡುತ್ತೇನೆ ಎಂದರು. ಇದನ್ನೂ ಓದಿ : ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ..!
